ಭರವಸೆಯಂತೆ ಸ್ಕೂಟರ್ ನೀಡಿದ ಸಚಿವ ಸಂತೋಷ್ ಲಾಡ್.ಅಂಗವಿಕಲರ ಮೊಗದಲ್ಲಿ ನಗು ಮೂಡಿಸಿದ ಸಚಿವರು.
ಧಾರವಾಡ:-ಈ ಹಿಂದೆ ನೀಡಿದ್ದ ಭರವಸೆಯಂತೆ ಅಂಗವಿಕಲರಿಗೆ ಸ್ಕೂಟರ್ ನೀಡಿ ಇಬ್ಬರ ಮೊಗದಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ನಗು ಮೂಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಿದ್ಧಪ್ಪ ಎಂಬ ಅಂಗವಿಕಲ ಯುವಕನಿಗೆ ಸಚಿವ ಸಂತೋಷ್ ಲಾಡ್ ಅವರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಸಚಿವರ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಸಿದ್ಧಪ್ಪ ಅವರು, ಸಂತೋಷ್ ಲಾಡ್ ಅವರಲ್ಲಿ ನೆರವು ಕೋರಿದ್ದರು. ಆಗ ಸ್ಕೂಟರ್ ಹಾಗೂ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.
ಅಂದು ನೀಡಿದ್ದ ಭರವಸೆಯಂತೆ ಇಂದು ಸ್ಕೂಟರ್ ಹಾಗೂ ಇಪ್ಪತ್ತೈದು ಸಾವಿರದ ಚೆಕ್ ನೀಡಿದ್ದಾರೆ. ಸಿದ್ಧಪ್ಪ ಅವರೊಂದಿಗೆ ಸ್ಕೂಟರ್ನಲ್ಲಿ ಸವಾರಿ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಅಂಗವೈಕಲ್ಯ ಮೆಟ್ಟಿನಿಂತು ಸಾಧಿಸುವ ಛಲ ಹೊಂದಿರುವ ಸಿದ್ಧಪ್ಪ ಅವರ ಬೆನ್ನುತಟ್ಟಿ ಸಚಿವರು ಶುಭ ಹಾರೈಸಿದ್ದಾರೆ.
“ಸಂತೋಷ್ ಲಾಡ್ ಅವರು ನೀಡಿದ ಮಾತಿನಂತೆ ಸಹಾಯ ಮಾಡಿದ್ದಾರೆ. ಅವರ ಸಹಾಯಕ್ಕೆ ಚಿರಋಣಿ. ಸ್ಕೂಟರ್ ನೀಡಿರುವುದರಿಂದ ಓಡಾಡಲು ಅನುಕೂಲವಾಗಿದೆ. ಆದ್ದರಿಂದ ಸಂತೋಷ್ ಲಾಡ್ ಹಾಗೂ ಅವರ ಫೌಂಡೇಶನ್ಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆʼ ಎಂದು ಸಿದ್ದಪ್ಪ ಅವರು ಹೇಳಿದ್ದಾರೆ.
ಮತ್ತೊಬ್ಬ ಅಂಗವಿಕಲನಿಗೆ ನೆರವು ಇದೇ ಸಂದರ್ಭದಲ್ಲಿ ಮತ್ತೊಬ್ಬ ಅಂಗವಿಕಲನಿಗೆ ತ್ರಿಚಕ್ರದ ಸ್ಕೂಟರ್ ಅನ್ನು ಸಂತೋಷ್ ಲಾಡ್ ಫೌಂಡೇಶನ್ ಮೂಲಕ ನೀಡಿದ್ದಾರೆ.