ನವದೆಹಲಿ: ನ್ಯಾಯದೇವತೆಯ ನೂತನ ಪ್ರತಿಮೆ ಹೀಗೆ ಇರಬೇಕು ಎಂದು ಸಿಜೆಐ ಡಿವೈ ಚಂದ್ರಚೂಡ್ ಆದೇಶಿಸಿದ್ದರು. ಈ ಆದೇಶದ ಮೇರೆಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ನ್ಯಾಯಮೂರ್ತಿಗಳ ಅಧ್ಯಯನಕ್ಕೆ ಮೀಸಲಿರುವ ಗ್ರಂಥಾಲಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟದೇ ಇರುವ ಹಾಗೂ ಕೈಯಲ್ಲಿ ಕತ್ತಿಯ ಬದಲಿಗೆ ಸಂವಿಧಾನ ಹಿಡಿದಿರುವ ಹೊಸ ನ್ಯಾಯದೇವತೆಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಆದರೆ ತಕ್ಕಡಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ನಿಷ್ಪಕ್ಷಪಾತವನ್ನು ಪ್ರತಿಬಿಂಬಿಸುತ್ತದೆ.
ಸಿಜೆಐ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯದೇವತೆ ಪ್ರತಿಮೆಯ ಕಲ್ಪನೆಯನ್ನು ಮರುವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ವಸಾಹತುಶಾಹಿ ಪರಂಪರೆಯನ್ನು ದಾಟಿ ಮುಂದುವರಿಯುವ ಅಗತ್ಯ ಈಗ ಎದುರಾಗಿದೆ. ಭಾರತದಲ್ಲಿ ಸಂವಿಧಾನದ ಅನುಸಾರವೇ ನ್ಯಾಯ ವಿತರಣೆಯಾಗಲಿದೆ. ಕಾನೂನು ಕುರುಡಲ್ಲ, ಅದು ಎಲ್ಲರಿಗೂ ಸಮಾನ ಎಂಬ ಸಂದೇಶ ರವಾನಿಸುವುದು ನ್ಯಾಯದೇವತೆ ಪ್ರತಿಮೆ ಮರುವಿನ್ಯಾಸದ ಹಿಂದಿನ ಉದ್ದೇಶವಾಗಿದೆ ಎಂದು ವರದಿಯಾಗಿದೆ.
ಇದೀಗ ಸಿಜೆಐ ಆದೇಶದಂತೆ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ಸುಪ್ರೀಂ ಕೋರ್ಟ್ನಲ್ಲಿ ತೆರೆಯಲಾಗಿದೆ. ಇಷ್ಟೇ ಅಲ್ಲದೇ ನ್ಯಾಯದೇವತೆಯ ಕೈಯಲ್ಲಿದ್ದ ಖಡ್ಗದ ಬದಲು ಭಾರತದ ಸಂವಿಧಾನ ನೀಡಲು ಸಿಜೆಐ ಸೂಚಿಸಿದ್ದಾರೆ. ಆದೇಶದಂತೆ ಈಗಾಗಲೇ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಇಡಲಾಗಿದೆ.