ಬೆಂಗಳೂರು: ಚನ್ನಪಟ್ಟಣದಲ್ಲಿ ಆಪರೇಷನ್ ಸಕ್ಸಸ್ ಆಗಿದ್ದು ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಂಗಳವಾರ ತಡರಾತ್ರಿ ಎರಡು ಸಲ ಮನೆಯಿಂದ ರಹಸ್ಯ ಸ್ಥಳಕ್ಕೆ ಹೋಗಿ ಯೋಗೀಶ್ವರ್ ಚರ್ಚಿಸಿದ್ದರು. ಮಧ್ಯರಾತ್ರಿ ಖಾಸಗಿ ಹೊಟೇಲಿನಲ್ಲಿ ಡಿಕೆಶಿಯನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ಪಕ್ಷ ಸೇರ್ಪಡೆಗೆ ಸಿಪಿವೈಗೆ ಡಿಕೆಶಿ ತಿಳಿಸಿದ್ದರು. ಅದರಂತೆ ಇಂದು ಬೆಳಗ್ಗೆಯೇ ಡಿಕೆಶಿ ನಿವಾಸಕ್ಕೆ ಯೋಗೀಶ್ವರ್ ತೆರಳಿದ್ದರು.
ಸಿಪಿ ಯೋಗೇಶ್ವರ್ ಅವರನ್ನು ಜೆಡಿಎಸ್ನಿಂದಲೇ ಸ್ಪರ್ಧೆ ಮಾಡಿಸಲು ಬಿಜೆಪಿ ಮುಂದಾಗಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರ ಮೂಲಕ ಯೋಗೇಶ್ವರ್ ಮನವೊಲಿಕೆಗೆ ಜೆಡಿಎಸ್ ಸಹ ಕಸರತ್ತು ನಡೆಸಿತ್ತು. ಆದರೆ ಡಿಕೆ ಬ್ರದರ್ಸ್ ಮಿಡ್ನೈಟ್ ಆಪರೇಷನ್ ಮಾಡಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ತರುವಲ್ಲಿ ಸಫಲರಾಗಿದ್ದಾರೆ.