ವಿಜಯಪುರ: ರೈತರ ಭೂಮಿಯನ್ನ ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಹರಿಹಾಯ್ತಿದ್ರೆ. ಅತ್ತ ಕಾಂಗ್ರೆಸ್ ಕೂಡಾ ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ದಾಖಲೆಯನ್ನ ಬಿಟ್ಟು ತಿರುಗೇಟು ಕೊಟ್ಟಿದೆ.
ಈ ಮಧ್ಯೆವಕ್ಫ್ ಬೋರ್ಡ್ನಿಂದ ಭಾರತೀಯರಿಗೆ ಅನ್ಯಾಯವಾಗುತ್ತಿದ್ದು, ವಕ್ಫ್ ಆಸ್ತಿಯನ್ನ ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸುವಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವಕ್ಫ್ ಬೋರ್ಡ್ನಿಂದಾಗಿ ಜಮೀನು ಮಾಲಿಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲಿಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್ಫ್ ಆಕ್ರಮಿಸಿಕೊಳ್ಳುತ್ತದೆ.
ವಕ್ಫ್ ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್ಫ್ ಬೋರ್ಡ್ಗೆ ಅನಿಯಂತ್ರಿತ, ಪರಿಮಿತ ಅಧಿಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ. ಧಾರವಾಡದ ಉಪ್ಪಿನಬೆಟಗೇರಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಎಂಬುವವರು ಕಳೆದ ವರ್ಷ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.