ಮಂಗಳೂರು:ಚನ್ನಪಟ್ಟಣಕ್ಕೆ ನೀವು ಮಾಡಿರೋ ಘನಂದಾರಿ ಕೆಲಸ ಪ್ಲೀಸ್ ಪಾಯಿಂಟ್ ಔಟ್ ಮಾಡ್ತೀರಾ!? ಎಂದು ಪ್ರಶ್ನಿಸುವ ಮೂಲಕ HDK ವಿರುದ್ಧ ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಚೆನ್ನಪಟ್ಟಣ, ರಾಮನಗರಕ್ಕೆ ಏನೂ ಕೊಡದ ಕುಮಾರಸ್ವಾಮಿಯವರಿಗೆ ಅಳು ಬರುವುದೇ ಚುನಾವಣೆ ಸಂದರ್ಭ. ಕನ್ನಡ ಬಾವುಟ ಹಾರಿಸಲೆಂದು ರಾಮನಗರ, ಚೆನ್ನಪಟ್ಟಣದ ಜನತೆ ತಮ್ಮನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು. ಆದರೆ ತಾವು ಒಂದು ದಿನವೂ ರಾಷ್ಟ್ರಧ್ವಜಕ್ಕೂ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ. ಯಾವುದಾದರೂ ಒಂದು ಗುರುತಿಸುವ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನು ಪ್ಲೀಸ್ ಪಾಯಿಂಟ್ ಔಟ್ ಮಾಡಿ. ಕೆರೆ ಮಾಡಿದ್ದು ಯೋಗೇಶ್, ದುಡ್ಡು ಕೊಟ್ಟಿದ್ದು ನಾನು. ಚೀಫ್ ಮಿನಿಸ್ಟರ್ ಆಗಿದ್ದಾಗಲೇ ಮಾಡಿಲ್ಲ. ಎಂಎಲ್ಎ ಆಗಿದ್ದಾಗ ಬಿಜೆಪಿಯೊಂದಿಗೆ ಸಂಪರ್ಕವಿತ್ತು. ಆವಾಗಲಾದರೂ ಗುರುತಿಸುವ ಏನಾದ್ರೂ ಕೆಲಸ ಮಾಡಬೇಕಿತ್ತಲ್ಲ. ಸುಮ್ಮನೆ ಓಟಿಗೋಸ್ಕರ ಬಂದು ಮಾತನಾಡೋದಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿನಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಯೋಗೀಶ್ವರ್ ಪಕ್ಷಾಂತರಿ ಎಂಬುದು ಒಪ್ಪುತ್ತೇನೆ. ಕಾಂಗ್ರೆಸ್, ಬಿಜೆಪಿಗೆ ಹೋದರು. ಈಗ ಎನ್ಡಿಎ ಸರಿಯಿಲ್ಲ, ಕುಮಾರಸ್ವಾಮಿ ಸರಿಯಿಲ್ಲ ಎಂದು ಎಂಎಲ್ಸಿ ಸ್ಥಾನ ಬಿಟ್ಟು ನಮ್ಮೊಂದಿಗೆ ಬಂದಿದ್ದಾರೆ. ಅವರು ಟಿಕೆಟ್ ಕೊಡ್ತೀನಿ ಅಂಥ ಹೇಳಿದ್ರೂ ಬಿಡ್ತೀನಿ ಅಂದಿದ್ದಾರೋ ಅದು ನಂಗೆ ಗೊತ್ತಿಲ್ಲ. ನಾನಿವತ್ತು ಚನ್ನಪಟ್ಟಣ ತಾಲೂಕಿಗೆ ವಿದ್ಯಾವಂತ, ಬುದ್ದಿವಂತನ ಆಯ್ಕೆ ಮಾಡಿದ್ದೇನೆ. ನೂರಾರು ಕೋಟಿ ರೂ. ಕೆಲಸ ಆಗಲೇ ಶುರು ಮಾಡಿದ್ದೇವೆ. ಸಾವಿರಾರು ಜನ ಬಡವರು ಬಂದು ಅರ್ಜಿ ಕೊಟ್ಟಿದ್ದಾರೆ, ಅವರಿಗೆ ಸ್ಪಂದಿಸ್ತೇವೆ ಎಂದರು.
ಜನತಾದಳಕ್ಕೆ ಯಾವುದೇ ಭವಿಷ್ಯ ಇಲ್ಲ, ಭವಿಷ್ಯ ಇರುವ ನಾವು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ. ಮೋದಿ ಚುನಾವಣೆಗೋಸ್ಕರ ಏನು ಬೇಕಾದರೂ ಮಾಡಲಿ. ಜನರು ನಮ್ಮನ್ನು ಮತ ಹಾಕಿ ಗೆಲ್ಲಿಸ್ತಾರೆ. ಶಕ್ತಿ ಯೋಜನೆ ನಾವು ಮಂಗಳೂರಿನಲ್ಲೇ. ಘೋಷಣೆ ಮಾಡಿದ್ದು. ಯಾವ ಯೋಜನೆಯನ್ನೂ ನಾವು ಮುಂದಿನ ಐದು ವರ್ಷಕ್ಕೂ ನಿಲ್ಲಿಸಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ ಎಲ್ಲನೂ ಕೊಡುತ್ತಿದ್ದೇವೆ. ಯಾವುದಾದರೂ ಒಂದನ್ನು ಬಿಜೆಪಿ ಅಧಿಕಾರ ಇದ್ದಾಗಲೂ ನಿಲ್ಲಿಸಲು ಆಗಿಲ್ಲ. ನಾವು ಬದುಕಿನ ಬಗ್ಗೆ ಕಾರ್ಯಕ್ರಮ ಕೊಟ್ಟರೆ, ಬಿಜೆಪಿಯವರು ಭಾವನೆ ಬಗ್ಗೆ ಕಾರ್ಯಕ್ರಮ ಕೊಡುತ್ತಿದ್ದಾರೆ.
ನಮ್ಮ ಯೋಜನೆಯನ್ನು ಬಿಜೆಪಿ ಆಡಳಿತದಲ್ಲೂ ತರುತ್ತಿದ್ದಾರೆ. ಮಧ್ಯಪ್ರದೇಶ, ಹರ್ಯಾಣ, ಮಹಾರಾಷ್ಟ್ರದಲ್ಲೂ ಆರಂಭ ಮಾಡಿದ್ದಾರೆ. ನಮ್ಮನ್ನು ಕಾಪಿ ಮಾಡೋದು ಮೋದಿಯವರಿಗೆ ಮುಜುಗರ ಆಗ್ತಿದೆ. ನಮ್ಮ ಆರ್ಥಿಕ ಬಲ ದೇಶದ ಆರ್ಥಿಕ ಬಲಕ್ಕಿಂತಲೂ ಗಟ್ಟಿಯಾಗಿದೆ. ಯತ್ನಾಳ್ ಒಬ್ಬ ಮೆಂಟಲ್ ಗಿರಾಕಿ, ಅವರ ಬಗ್ಗೆ ಮಾತನಾಡಲ್ಲ.
ವಕ್ಫ್ ನೊಟೀಸ್ ಕೊಟ್ಟಿದ್ದು ಬಿಜೆಪಿ ಸರ್ಕಾರ. ನಾವು ರೈತರ ಜಮೀನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ತಪ್ಪು ಮಾಡಿದ್ರೆ ನಾವು ಕ್ರಮ ಕೈಗೊಳ್ತೇವೆ ಎಂದು ಡಿಕೆಶಿ ಹೇಳಿದರು.