ಬೆಂಗಳೂರು: ಆಪರೇಷನ್ ಕಮಲ ಇಡೀ ದೇಶದಲ್ಲಿ ಹೊಸ ಮಾದರಿ ಪರಿಚಯಿಸಿದ ರಾಜಕಾರಣ. ಹಲವು ಸರ್ಕಾರಗಳನ್ನೇ ಅಪೋಷನ್ ಪಡೆದ ಈ ಅಸ್ತ್ರಕ್ಕೆ ಹಸ್ತ ಈಗಲೂ ಬೆವರುತ್ತೆ. 50 ಶಾಸಕರು, ಒಬ್ಬೊಬ್ಬರಿಗೆ 50 ಕೋಟಿ ಆಫರ್. ಸಿದ್ದರಾಮಯ್ಯ ಹಾಕಿದ ಬಾಂಬ್ ಸದ್ಯ ರಾಜ್ಯ ರಾಜಕಾರಣದಲ್ಲೇ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಕಡೆಯಿಂದ 50 ಕೋಟಿ ಅಲ್ಲ 100 ಕೋಟಿ ರೂಪಾಯಿ ಆಫರ್ ಬಂದಿತ್ತು ಎಂದು ಶಾಸಕ ರವಿಕುಮಾರ್ ಗಣಿಗ ಹೊಸ ಆರೋಪ ಮಾಡಿದ್ದಾರೆ.
ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು 50 ಕೋಟಿ ರೂಪಾಯಿ ಅಲ್ಲ, 100 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಶಾಸಕರ ಭೇಟಿಯ ಆಡಿಯೋ, ವೀಡಿಯೋ ರೆಕಾರ್ಡ್ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವ ಮಾತು ಸತ್ಯ. ನಮ್ಮ ಶಾಸಕರನ್ನು ವಿಪಕ್ಷದವರು ಎಲ್ಲಿ ಭೇಟಿ ಮಾಡಿದ್ದರು, ಯಾವ ಗೆಸ್ಟ್ಹೌಸ್ಗೆ ಬಂದಿದ್ದರು, ಯಾವ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದರು ಎನ್ನುವುದರ ವೀಡಿಯೋ, ಆಡಿಯೋ ರೆಕಾರ್ಡ್ ಇದೆ. ಅದನ್ನು ಸಿಎಂ ಗಮನಕ್ಕೆ ತಂದಿದ್ದೇವೆ ಎಂದರು.ಹಣದ ಆಫರ್ ಕೊಟ್ಟಿದ್ದು ಯಾರು ಎಂಬುದು ಮಾತನಾಡಿದವರಿಗೂ ಗೊತ್ತು, ಮಾತನಾಡಿಸಿದವರಿಗೂ ಗೊತ್ತು.
ನಮ್ಮತ್ರ ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇವೆ. ಬಿಜೆಪಿಯವರಿಗೆ ಹಿಂದಿನ ಸರ್ಕಾರದಲ್ಲಿ ಮಾಡಿದ್ದ ಹಗರಣಗಳ ಕಂಟಕ ಸುತ್ತಿಕೊಂಡಿದೆ. ಅದರಿಂದ ಬಚಾವಾಗಲು, ಆ ಅಕ್ರಮದ ದುಡ್ಡನ್ನೇ ಮುಂದಿಟ್ಟುಕೊಂಡು ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಅದರ ಜತೆಗೆ ಕೇಂದ್ರ ಸರ್ಕಾರದ ಬೆಂಬಲ ಇದೆ. ಇದೀಗ ಜೆಡಿಎಸ್ ಕೂಡ ಜತೆಗೂಡಿದೆ ಎಂದು ಟೀಕಿಸಿದರು.