ಕೇರಳದ ವಯನಾಡಿನಲ್ಲಿ ಮಂಗಳವಾರ ಮುಂಜಾನೆ ನಡೆದ ಭೀಕರ ಭೂಕುಸಿತ ನಿಜಕ್ಕೂ ಆಘಾತಕಾರಿ ಘಟನೆ. ಅರಬ್ಬಿ ಸಮುದ್ರದಲ್ಲಿ ತಾಪಮಾನ ಹೆಚ್ಚಳ ಉಂಟಾಗಿದ್ದರಿಂದ ದಟ್ಟವಾದ ಮೋಡಗಳು ನಿರ್ಮಾಣವಾಗಿದ್ದು, ಕೇರಳದಲ್ಲಿ ಅಲ್ಪಾವಧಿಯಲ್ಲಿಯೇ ಭಾರೀ ಮಳೆಯಾಗುತ್ತಿದೆ ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಮುನ್ಸೂಚನೆ ವ್ಯವಸ್ಥೆ ಮತ್ತು ಅಪಾಯವನ್ನು ಎದುರಿಸುತ್ತಿರುವ ಜನರನ್ನು ಸುರಕ್ಷಿತ ವಸತಿ ನಿರ್ಮಾಣ ಮಾಡುವಂತೆ ಸಲಹೆ ನೀಡಲಾಗಿದೆ.
ಇನ್ನೂ ಕೇರಳದ ವಯನಾಡಿನಲ್ಲಿ ಕಂಡು ಕೇಳರಿಯದ ಭೀಕರ ಭೂಕುಸಿತದಲ್ಲಿ ಏಳು ಮಕ್ಕಳು ಸೇರಿದಂತೆ 100 ಮಂದಿ ಮೃತಪಟ್ಟಿದ್ದು, 150 ಜನ ಗಾಯಗೊಂಡಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಮಂಗಳವಾರ ನಸುಕಿನ ಜಾವ ವಯನಾಡು ಜಿಲ್ಲೆಯ ಎರಡು ಕಡೆ ಸಂಭವಿಸಿದ ಪ್ರಳಯಕಾರಿ ಭೂಕುಸಿತ ನಾಲ್ಕು ಗ್ರಾಮಗಳನ್ನು ಅಪೋಶನ ತೆಗೆದುಕೊಂಡಿದೆ. ಸುಮಾರು 400 ಕುಟುಂಬಗಳು ತೊಂದರೆಗೀಡಾಗಿದ್ದು, ಸಮರೋಪಾದಿಯಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಜೋರು ಮಳೆ ಹಿನ್ನೆಲೆಯಲ್ಲಿ ಎತ್ತರ ಪ್ರದೇಶವಾದ ವಯನಾಡಿನ ಮುಂಡಕೈ ಎಂಬಲ್ಲಿ ಭಾರಿ ಪ್ರಮಾಣದ ಭೂ ಕುಸಿತವಾಗಿದೆ. ಈಗಾಗಲೇ ನೀರಿನಲ್ಲಿ ಕೊಚ್ಚಿ ಹೋಗಿ, ಮಣ್ಣಿನಡಿ ಸಿಲುಕಿ 100 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ವಯನಾಡಿನಲ್ಲಿ ಸಂಭವಿಸಿರುವ ಭೂ ಕುಸಿತದ ಹಿನ್ನೆಲೆಯಲ್ಲಿ ಮೈಸೂರಿಗರು ಯಾರಾದರೂ ಇದ್ದರೆ ರಕ್ಷಣೆ ಮಾಡುವ ಸಲುವಾಗಿ ಜಿಲ್ಲಾಡಳಿತ ಇಬ್ಬರು ಅಧಿಕಾರಿಗಳನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೇರಳ ರಾಜ್ಯದ ವಯನಾಡಿನಲ್ಲಿಭೂ ಕುಸಿತ ಉಂಟಾಗಿ ಸಾವು-ನೋವು ಸಂಭವಿಸಿವೆ.
ಕೇರಳ ಮೈಸೂರು ಜಿಲ್ಲೆಯ ಗಡಿಭಾಗವಾದ ಕಾರಣ ಮೈಸೂರಿಗರು ಯಾರಾದರೂ ಭೂ ಕುಸಿತಕ್ಕೆ ಸಿಲುಕ್ಕಿದ್ದರೆ ಮಾಹಿತಿ ನೀಡಲು ಜಿಲ್ಲಾಡಳಿತ ಕಂಟ್ರೋಲ್ ರೂಂ ತೆರೆದಿದೆ. ಅಷ್ಟೇ ಅಲ್ಲದೆ, ಮೈಸೂರಿಗರ ರಕ್ಷಣೆಗೆ ಜಿಲ್ಲಾಡಳಿತ ಇಬ್ಬರು ಅಧಿಕಾರಿಗಳ ತಂಡವನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ.
ಎನ್ಡಿಆರ್ಎಫ್, ಸ್ಥಳೀಯ ಪೊಲೀಸರು ಮತ್ತು ಸೈನ್ಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿ, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಕ್ಷಣಾ ಕಾರ್ಯಾಚರಣೆಯಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈಜೋಡಿಸಲಿದೆ. ರಕ್ಷಣಾ ತಂಡ, ಅಗತ್ಯ ಸಾಮಗ್ರಿ ಕಳುಹಿಸಲಾಗುತ್ತಿದೆ ಎಂದು ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.