ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 29ಕ್ಕೆ ಬಿಗ್ ಬಾಸ್ ಹೊಸ ಸೀಸನ್ ಆರಂಭವಾಗಲಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರಿಯುತ್ತಿದ್ದಾರೆ. ಈ ಬಗ್ಗೆ ಅಪ್ಡೇಟ್ ನೀಡಲು ‘ಕಲರ್ಸ್ ಕನ್ನಡ’ ಟಿವಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಿಚ್ಚ ಸುದೀಪ್ ಅವರು ಅಬ್ಬರಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಸುದೀಪ್ ಅವರು ಯಶಸ್ವಿಯಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಅವರಿಂದಾಗಿ ಎಲ್ಲ 10 ಸೀಸನ್ಗಳಿಗೆ ಸ್ಟಾರ್ ಮೆರುಗು ಸಿಕ್ಕಿತು. ಈಗ ಸಡನ್ ಆಗಿ ಬೇರೆ ಆ್ಯಂಕರ್ ಬರುತ್ತಾರೆ ಎಂದರೆ ಅಭಿಮಾನಿಗಳು ಅದನ್ನು ಸ್ವೀಕರಿಸುವುದು ಕಷ್ಟ. ಹಾಗಿದ್ದರೂ ಕೂಡ ಕೆಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಸುದೀಪ್ ಬದಲು ಬೇರೆಯವರು ಈ ಬಾರಿ ನಿರೂಪಣೆ ಮಾಡಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಅದು ನಿಜವಾಗಿಲ್ಲ.
ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್ ಫಿನಾಲೆಯ ಸಂಚಿಕೆಯ ನಡುವೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಹೊಸ ಪ್ರೋಮೋ ಬಿತ್ತರ ಆಗಿದೆ. ಇದರಲ್ಲಿ ಸುದೀಪ್ ಅವರು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ‘10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಪ್ರೋಮೋ ನೋಡಿ ಸುದೀಪ್ ಅಭಿಮಾನಿಗಳಿಗೆ ಖುಷಿ ಆಗಿದೆ.
‘ಇನ್ಮೇಲೆ ಕಲರ್ಸ್ ಕನ್ನಡ ನಂಬರ್ 1 ಆಗುತ್ತೆ’ ಎಂದು ಕೆಲವು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಇದು 11ನೇ ಸೀಸನ್ ಆದ್ದರಿಂದ ಈ ಬಾರಿ ಬಿಗ್ ಬಾಸ್ ಶೋ ತುಂಬ ಸ್ಪೆಷಲ್ ಆಗಿರಲಿದೆ ಎಂಬ ನಿರೀಕ್ಷೆ ವೀಕ್ಷಕರಿಗೆ ಇದೆ. ಅದಕ್ಕೆ ತಕ್ಕಂತೆಯೇ ಪ್ರೋಮೋದಲ್ಲಿ ಸುದೀಪ್ ಅವರು ‘ಇದು ಹೊಸ ಅಧ್ಯಾಯ’ ಎಂದು ಹೇಳಿದ್ದಾರೆ.