ಬಳ್ಳಾರಿ: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿ ಮೂರು ತಿಂಗಳು ಕಳೆದಿದೆ. ಈವರೆಗೆ ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಒಂದೊಮ್ಮೆ ಅರ್ಜಿ ಸಲ್ಲಿಕೆ ಆದರೂ ಜಾಮೀನು ಸಿಗೋದು ಅಷ್ಟು ಸುಲಭದಲ್ಲಿ ಇಲ್ಲ ಎಂಬ ಅಭಿಪ್ರಾಯ ಇದೆ. ಇದಕ್ಕೆ ಕಾರಣ ಅವರು ಮಾಡಿಕೊಳ್ಳುತ್ತಿರುವ ಎಡವಟ್ಟುಗಳು. ದರ್ಶನ್ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ದಿನಕ್ಕೊಂದು ಅಸ್ತ್ರ ಸಿಗುತ್ತಿದೆ. ಈ ಸಮಸ್ಯೆಗಳನ್ನು ಸ್ವತಃ ದರ್ಶನ್ ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಇದರಿಂದ ಮುಂದಿನ ಕಾನೂನು ಹೋರಾಟಕ್ಕೆ ತೊಡಕಾಗಬಹುದು ಎಂಬ ಆತಂಕ ಇದೀಗ ಅವರ ವಕೀಲರಿಗೆ ಕಾಡ್ತಿದೆ. ಇದೇ ಕಾರಣಕ್ಕೆ ದರ್ಶನ್ಗೆ ವಕೀಲರು ಪತ್ರ ಬರೆದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ಆರೋಪಿ ದರ್ಶನ್ ಅವರನ್ನು ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿ ಯಾವುದೇ ವಿಶೇಷ ಸವಲತ್ತನ್ನು ಕೊಡುತ್ತಿಲ್ಲ. ಇದೇ ಕಾರಣಕ್ಕೆ ದರ್ಶನ್ ಜೈಲಿನಲ್ಲಿ ಒದ್ದಾಡುತ್ತಿದ್ದಾರೆ. ಹೀಗಾಗಿ ಮಾಧ್ಯಮಗಳ ಎದುರು ಅಸಭ್ಯ ವರ್ತನೆ ತೋರಿದ್ದರು. ಅಲ್ಲದೇ ಟಿವಿ ಬೇಕು. ಒಳ್ಳೆ ಟಿವಿ ಕೊಡಿ. ನಾನೇನು ಇಲ್ಲಿ ಅಪರಾಧಿ ಅಲ್ಲ, ಆರೋಪಿ ಅಷ್ಟೇ. ಇಷ್ಟೊಂದು ಕಟುವಾಗಿ ನಡೆಸಿಕೊಳ್ಳಬೇಡಿ ಎಂದು ಜೈಲಿನಲ್ಲಿ ಕಿರಿಕ್ ಮಾಡಿದ್ದರು.
ಇದರ ನಡುವೆ ಬಾಡಿ ಫಿಟ್ನೆಸ್ಗಾಗಿ ಪ್ರೋಟಿನ್ ಹಾಗೂ ವಿಟಮಿನ್ ಮಾತ್ರೆಗಳು ಬೇಕೆಂದು ಕ್ಯಾತೆ ತೆಗೆದಿದ್ದರು. ಈ ವೇಳೆ ಜೈಲಾಧಿಕಾರಿಗಳು ಕಾನೂನಿನ ಪ್ರಕಾರ ವಿಚಾರಾಣಾಧಿನ ಕೈದಿಗೆ ಏನೆಲ್ಲಾ ಕೊಡಲು ಅವಕಾಶ ಇದೆಯೋ ಅಷ್ಟನ್ನು ಮಾತ್ರ ಕೊಡ್ತೀವಿ. ಹೆಚ್ಚಿಗೆ ಏನನ್ನೂ ಕೊಡೋದಕ್ಕೆ ಆಗಲ್ಲ ಎಂದಿದ್ದರು.ಇದೆಲ್ಲವನ್ನು ಗಮನಿಸಿದ್ದ ವಕೀಲರು ಜೈಲಿನಲ್ಲಿ ದುರ್ನಡತೆ ಹಾಗೂ ಕಿರಿ ಕಿರಿ ಮಾಡದಂತೆ ಆರೋಪಿ ದರ್ಶನ್ಗೆ ನೀತಿ ಪಾಠ ಮಾಡಿದ್ದಾರೆ. ಇದರಿಂದ ಕಾನೂನು ಹೋರಾಟಕ್ಕೆ ತೊಡಕಾಗುತ್ತೆ. ಜಾಮೀನು ಸಿಗುವುದು ಕಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.