ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದವಾದ ಲಡ್ಡುಗೆ ತನ್ನದೇ ಆದ ವಿಶೇಷ ರುಚಿಯಿದೆ. ಬೇರೆಲ್ಲೂ ಲಡ್ಡುಗೆ ಈ ರುಚಿ ಇರುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ತೆರಳುವ ಭಕ್ತರ ಪೈಕಿ ಹಲವರು ಈ ಪ್ರಸಾದಕ್ಕಾಗಿಯೇ ಕ್ಯೂನಲ್ಲಿ ನಿಂತು ಲಡ್ಡುಗಳನ್ನು ಖರೀದಿಸುತ್ತಾರೆ. ಆದರೆ, ಸಸ್ಯಾಹಾರಿ ಭಕ್ತರಿಗೆ ದೊಡ್ಡ ಆಘಾತಕಾರಿ ವಿಷಯವೊಂದನ್ನು ಲ್ಯಾಬ್ ವರದಿ ಬೆಳಕಿಗೆ ತಂದಿದೆ. ತಿರುಪತಿಯಲ್ಲಿ ತಯಾರಿಸಲಾಗುವ ಲಡ್ಡುವನ್ನು ದನದ ಕೊಬ್ಬು, ಮೀನಿನ ಎಣ್ಣೆ ಬಳಸಿ ತಯಾರಿಸಲಾಗುತ್ತಿತ್ತು ಎಂದು ವರದಿ ಖಚಿತಪಡಿಸಿದೆ.
ಇದರ ಬೆನ್ನಲ್ಲೇ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ವಿವಾದ ಜೋರಾಗುತ್ತಿದ್ದಂತೆ ಮಾಜಿ ಸಿಎಂ ಜಗನ್ ರೆಡ್ಡಿ ಆಂಧ್ರ ಹೈಕೋರ್ಟ್ ಮೊರೆ ಹೋಗಿದ್ದಾರೆ. ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದಾರೆ. ಹೀಗಾಗಿ ಈ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ಹೈಕೋರ್ಟ್ ನೇಮಿಸಿದ ಸಮಿತಿ ತನಿಖೆ ನಡೆಸಬೇಕು ಎಂದು ಜಗನ್ ಪರ ವಕೀಲರು ಮನವಿ ಮಾಡಿದರು.ಈ ವೇಳೆ ಸೆ.25 ರ ಒಳಗಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ. ಅಂದು ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ಸೂಚಿಸಿದೆ.
ಲ್ಯಾಬ್ ವರದಿಯಲ್ಲಿ ಏನಿದೆ?
ಲಡ್ಡುಗೆ ಬಳಸಿದ ತುಪ್ಪದಲ್ಲಿ ಮೀನೆಣ್ಣೆ, ಹಂದಿಯ ಕೊಬ್ಬು, ತಾಳೆ ಎಣ್ಣೆ ಕೊಬ್ಬು, ತೆಂಗಿನ ಎಣ್ಣೆಯ ಕೊಬ್ಬು ಪತ್ತೆಯಾಗಿದೆ. ಸೋಯಾ, ಸೂರ್ಯಕಾಂತಿ, ಆಲಿವ್, ಹತ್ತಿ ಬೀಜದೆಣ್ಣೆ ಸಿಕ್ಕಿದೆ. ತುಪ್ಪದಲ್ಲಿ ವ್ಹೀಟ್ ಜೆರ್ಮ್ ಆಯಿಲ್, ಮೇಜ್ ಜೆರ್ಮ್ ಆಯಿಲ್ ಪತ್ತೆಯಾಗಿದೆ. ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ.
ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ ಅವರು ಚಂದ್ರಬಾಬು ನಾಯ್ಡು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ. ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.