ಬೆಂಗಳೂರು: ಬಿಬಿಎಂಪಿ ಆಟದ ಮೈದಾನದ ಗೇಟ್ ಗೇಟ್ ಮೈಮೇಲೆ ಬಿದ್ದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರಂ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿತ್ತು. ಪುತ್ರನ ಸಾವಿನ ನೋವಿನಲ್ಲೂ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಹೌದು ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್ನ್ಯಾಷನಲ್ ಐ ಬ್ಯಾಂಕ್ಗೆ ದಾನ ಮಾಡಲು ಆತನ ತಂದೆ ವಿಜಯ್ ಪವಾರ್ ಮುಂದಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುವುದು.
ಮೃತ ಬಾಲಕನ ತಂದೆ ಸ್ನೇಹಿತ ಮಾತನಾಡಿ, ನಿರಂಜನ್ ಕಳೆದುಕೊಂಡು ಅವರ ತಂದೆ ದುಃಖದಲ್ಲಿದ್ದಾರೆ. ನಿನ್ನೆ ಸಚಿವ ದಿನೇಶ್ ಗುಂಡೂರಾವ್ ಅವರು ಬಾಲಕನ ಪೋಷಕರನ್ನು ಭೇಟಿ ಮಾಡಿ ಸಂತೈಸಿದ್ದಾರೆ. ನಾವು ನಿರಂಜನ್ನನ್ನು ಕಳೆದುಕೊಂಡಿದ್ದೇವೆ. ಬೇರೆಯವರಿಗೆ ಉಪಯೋಗವಾಗಲಿ ಎಂದು ಆತನ ಕಣ್ಣುಗಳನ್ನು ದಾನ ಮಾಡಲು ಬಾಲಕನ ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದ.