ಬೆಂಗಳೂರು: ನಗರದ ವೈಯಾಲಿಕಾವಲ್ನಲ್ಲಿ ನಡೆದ ಮಹಾಲಕ್ಷ್ಮೀ ಕೊಲೆ ಪ್ರಕರಣವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ಕೊಲೆಗಾರ ಒಡಿಶಾದಲ್ಲಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಇನ್ನೇನು ಆತನನ್ನು ಬಂಧಿಸಬೇಕು ಎನ್ನುವಾಗಲೇ ಶಂಕಿತ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆಗೆ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್ನಲ್ಲಿ ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ರೀತಿ ಕೊಲೆ ಮಾಡಿದ? ಏಕೆ ಕೊಲೆ ಮಾಡಿದ ಎಂಬ ವಿಚಾರಗಳ ಬಗ್ಗೆ ಮೃತ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.
ಡೆತ್ ನೋಟ್ನಲ್ಲೇನಿದೆ?
ಸೆಪ್ಟಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಮಹಾಲಕ್ಷ್ಮೀ ಹತ್ಯೆ ಕುರಿತು ರಂಜನ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ. ಸೆಪ್ಟಂಬರ್ 3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದಾಗಿ ಬರೆದಿದ್ದಾನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು, ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ ನೋಟ್ನಲ್ಲಿ ಕೊಲೆ ಮಾಡಲು ಕಾರಣವೇನೆಂಬುದನ್ನು ರಂಜನ್ ಬಹಿರಂಗಪಡಿಸಿದ್ದಾನೆ.
ಇಬ್ಬರು ಒಂದೇ ಕಡೆ ಕೆಲಸ ಮಾಡ್ತಿದ್ದ ಕಾರಣ ಇಬ್ಬರ ಮಧ್ಯೆ ಸಲುಗೆ ಹೆಚ್ಚಾಗಿತ್ತು. ತನನ್ನು ಮದುವೆ ಆಗುವಂತೆ ಮಹಾಲಕ್ಷ್ಮಿ ಒತ್ತಾಯ ಮಾಡ್ತಿದ್ದಳಂತೆ. ಕೆಲಸ ಮಾಡುವ ಸ್ಥಳದಲ್ಲಿ ಬೇರೆ ಹುಡುಗಿಯರು ಮುಕ್ತಿ ರಂಜನನ್ನ್ನು ಮಾತನಾಡಿಸಿದ್ರೆ ಜಗಳ ಮಾಡ್ತಿದ್ಲಂತೆ. ಆದ್ರೆ ಮಹಾಲಕ್ಷ್ಮಿ ಬಗ್ಗೆ ಎಲ್ಲ ತಿಳಿದುಕೊಂಡಿದ್ದ ರಂಜನ್ ಮದುವೆಗೆ ನಿರಾಕರಿಸಿದ್ದ.
ಆರೋಪಿ ರಂಜನ್ ಮೊದಲು ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಆಕೆಯನ್ನ ಹ್ಯಾಕ್ಸಲ್ ಬ್ಲೇಡ್ ನಿಂದ ಕತ್ತರಿಸಿದ್ದ. ಬಾತ್ ರೂಂನಲ್ಲಿ ಆಕೆ ದೇಹವನ್ನ ಪೀಸ್ ಪೀಸ್ ಮಾಡಿದ್ದ. ನಂತರ ಫ್ರಿಡ್ಜ್ ಗೆ ಮೃತದೇಹ ತುಂಬಿದ್ದ. ಸಾಕ್ಷಿ ನಾಶಪಡಿಸಲು ಬಾತ್ ರೂಂನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿದ್ದ ಎಂದು ತಿಳಿದುಬಂದಿದೆ. ಇನ್ನು ಮುಕ್ತಿ ರಂಜನ್ ರಾಯ್ ಮನೆಯಲ್ಲಿ ಬೆಂಗಳೂರು ಪೊಲೀಸರ ತಂಡ ಬೀಡುಬಿಟ್ಟಿದೆ. ಸ್ಥಳೀಯ ಪೊಲೀಸರ ಜೊತೆ ಆರೋಪಿಯ ಬೆರಳಚ್ಚು ಹಾಗೂ ಡೆತ್ ನೋಟು ಪ್ರತಿಯನ್ನು ಪಡೆಯಲಿದ್ದಾರೆ.