ಬೆಂಗಳೂರು:- ರಾಜಧಾನಿ ಬೆಂಗಳೂರಿಗೆ ಬರುತ್ತಿದ್ದ ಲಡ್ಡು ಪ್ರಸಾದವನ್ನು ಟಿಟಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ
TTD ಈ ತೀರ್ಮಾನ ಕೈಗೊಂಡಿದೆ.
ತಿರುಪತಿಯಲ್ಲಿ ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ತಿಮ್ಮಪ್ಪನ ಸನ್ನಿದಿಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ, ಬೆಟ್ಟದಿಂದ ಲಡ್ಡು ಪೂರೈಸುವ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಕ್ಟೋಬರ್ 12ರವರೆಗೆ ಬೆಂಗಳೂರಿನ ತಿರುಪತಿ ದೇವಸ್ಥಾನಕ್ಕೆ ಟಿಟಿಡಿ ಆಡಳಿತ ಮಂಡಳಿ ಲಡ್ಡು ಸರಬರಾಜು ಮಾಡುವುದಿಲ್ಲ
ತಿರುಪತಿ ಲಡ್ಡು ವಿವಾದ
ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವಾದ ಲಡ್ಡು ತಯಾರಿಕೆಗೆ ಕಳಪೆ ಗುಣಮಟ್ಟದ ತುಪ್ಪ ಬಳಸಲಾಗಿದೆ. ಆ ತುಪ್ಪದಲ್ಲಿ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಮತ್ತಿತರ ಎಣ್ಣೆಗಳ ಅಂಶ ಇದ್ದುದು ಲ್ಯಾಬ್ ವರದಿಯಲ್ಲಿ ಪತ್ತೆಯಾಗಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಹಿಂದೂಗಳ ಭಾವನಗೆ ದಕ್ಕೆ ಉಂಟು ಮಾಡಿದೆ.
ಲಡ್ಡು ತಯಾರಿಕೆಗೆ ಕೆಎಂಎಫ್ ತುಪ್ಪ
ತಿರುಪತಿ ಲಡ್ಡು ಪಾವಿತ್ರ್ಯತೆಗೆ ಧಕ್ಕೆ ವಿವಾದದ ಬೆನ್ನಲ್ಲೇ ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ತಿರುಪತಿ ಲಡ್ಡು ವಿವಾದ ಮಧ್ಯೆಯೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್ಗೆ ಟಿಟಿಡಿ ಮನವಿ ಮಾಡಿತ್ತು. ಅದರಂತೆ ಕೆಎಂಎಫ್ ಟಿಟಿಡಿಗೆ ಸೂಕ್ತ ಭದ್ರತೆಯೊಂದಿಗೆ ತುಪ್ಪ ಕಳುಹಿಸುತ್ತಿದೆ.