ರತನ್ ಟಾಟಾ ಎಂಬ ಹೆಸರು ಪದಗಳಿಗಿಂತಲೂ ಮೀರಿದ್ದು. ಅವರ ವ್ಯಕ್ತಿತ್ವಕ್ಕೆ ಅಷ್ಟು ಘನತೆ, ಗೌರವ ಇದೆ. ದೇಶದ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ಗೌರವಿಸುವ ಜನರಲ್ಲಿ ಒಬ್ಬರಾಗಿದ್ದರು. ತುಂಬಾ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ರತನ್ ಟಾಟಾ, ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಮಹಾರಾಷ್ಟ್ರ ಸರ್ಕಾರ ಶಿಫಾರಸು ಮಾಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಬಗ್ಗೆ ಏಕನಾಥ್ ಶಿಂಧೆ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾಗೆಯೇ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ಪ್ರಸ್ತಾವನೆಯನ್ನು ಈ ಸಮಯದಲ್ಲಿ ಅನುಮೋದಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಹೊಸ ಕೈಗಾರಿಕೆಗಳನ್ನು ನಿರ್ಮಿಸುವುದರ ಜೊತೆಗೆ ದೇಶವನ್ನು ಮುಂದಕ್ಕೆ ಕೊಂಡೊಯ್ಯಬಹುದು. ಆದರೆ ಅದಕ್ಕೆ ನಿಜವಾದ ದೇಶಭಕ್ತಿ ಮತ್ತು ಸಮಾಜದ ಬಗ್ಗೆ ಪ್ರಾಮಾಣಿಕ ಕಾಳಜಿಯ ಅಗತ್ಯವಿರುತ್ತದೆ. ಟಾಟಾ ಈ ಗುಣಗಳನ್ನು ಹೊಂದಿದ್ದರು. ಉದ್ಯಮ ಕ್ಷೇತ್ರ ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ಧಿಯ ಕಾರ್ಯದಲ್ಲೂ ಅವರ ಕೊಡುಗೆ ಅಸಾಧಾರಣವಾದುದು. ಅವರು ಮಹಾರಾಷ್ಟ್ರದ ಮಗ ಮತ್ತು ಭಾರತದ ಹೆಮ್ಮೆ.
ಟಾಟಾ ಉನ್ನತ ನೈತಿಕ ಮೌಲ್ಯಗಳನ್ನು ಅನುಸರಿಸಿದರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಛಾಪು ಮೂಡಿಸಿದರು. ಅವರ ಸಾವಿನೊಂದಿಗೆ ದೇಶದ ಪ್ರಮುಖ ಸ್ತಂಭ ಕುಸಿದಿದೆ. ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ನಮ್ಮ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತದೆ ಎಂದು ತಿಳಿಸಿದ್ದಾರೆ.