ಮೈಸೂರು:- ಈ ಮೊಬೈಲ್ ಬಂದ ಮೇಲೆ ಎಷ್ಟೋ ಜನ ಪ್ರಪಂಚವನ್ನೇ ಮರೆತು ಬಿಟ್ಟಿದ್ದಾರೆ. ನಾವು ಏನ್ ಮಾಡ್ತಿದ್ದೀವಿ ಅನ್ನೋ ಸಣ್ಣ ಪರಿಜ್ಞಾನವು ಇರೋದಿಲ್ಲ. ಅದರಂತೆ ಇಲ್ಲಿ ಮೊಬೈಲ್ ನಿಂದ ಭಾರೀ ಎಡವಟ್ಟು ಸಂಭವಿಸಿದೆ.
ಸ್ಟೇಷನ್ ಮಾಸ್ಟರ್ ಮೊಬೈಲ್ ನೋಡಿಕೊಂಡು ಕುಳಿತ್ತಿದ್ದ ವೇಳೆ ರೈಲು ಬಂದು ಗೂಡ್ಸ್ ಆಟೊಗೆ ಡಿಕ್ಕಿಯಾಗಿ ತಂದೆ ಸೇರಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರಿನ ಇಲವಾಲ ಹೋಬಳಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್ ಬಳಿ ದುರ್ಘಟನೆ ನಡೆದಿದೆ.
ಇಲವಾಲದ ಮಲ್ಲೇಗೌಡನ ಕೊಪ್ಪಲು ಗ್ರಾಮದ ಬಳಿ ದಸರಾ -ಅರಸೀಕೆರೆ ವಿಶೇಷ ರೈಲು ಹೋಗುತ್ತಿತ್ತು. ನಿಯಮದಂತೆ ಸ್ಟೇಷನ್ ಮಾಸ್ಟರ್ ಗೇಟ್ ಹಾಕಬೇಕಿತ್ತು. ಮೊಬೈಲ್ನಲ್ಲಿ ಸ್ಟೇಷನ್ ಮಾಸ್ಟರ್ ಮಗ್ನನಾಗಿ ಗೇಟ್ ಹಾಕುವುದನ್ನೇ ಮರೆತು ಬಿಟ್ಟಿದ್ದಾನೆ. ಹೀಗಾಗಿ ರೈಲು ಬರುವುದನ್ನು ಗಮನಿಸಿದೇ ತನ್ನೆರಡು ಮಕ್ಕಳೊಂದಿಗೆ ತಂದೆ ಗೂಡ್ಸ್ ಆಟೊದಲ್ಲಿ ಹಳಿ ದಾಟಲು ಮುಂದಾಗಿದ್ದಾರೆ. ಆಗ ವೇಗವಾಗಿ ಬಂದ ರೈಲು ಆಟೊಗೆ ಡಿಕ್ಕಿಯಾಗಿದೆ. ಇದರಿಂದ ಆಟೊದಲ್ಲಿದ್ದ ತಂದೆ ಹಾಗೂ 9, 5 ವರ್ಷದ ಎರಡು ಮಕ್ಕಳು ಗಾಯಗೊಂಡಿದ್ದಾರೆ.
ರೈಲು ಡಿಕ್ಕಿಯಾದ ರಭಸಕ್ಕೆ ಆಟೋ ಜಖಂ ಆಗಿದ್ದು, ದಸರಾ -ಅರಸೀಕೆರೆ ಸ್ಪೆಷಲ್ ರೈಲಿಗೆ ಆಟೋ ಸಿಲುಕಿತ್ತು. ಬಳಿಕ ಅದನ್ನು ಬೇರ್ಪಡಿಸಲಾಗಿದೆ. ಸ್ಟೇಷನ್ ಮಾಸ್ಟರ್ ಯಡವಟ್ಟಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.