ನವದೆಹಲಿ: ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೌದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ.ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನ್ಯಾ.ಖನ್ನಾ ಅವರ ಹೆಸರನ್ನು ನ್ಯಾ.ಡಿವೈ ಚಂದ್ರಚೂಡ್ ಅವರು ಶಿಫಾರಸು ಮಾಡಿದ್ದರು. ಇವರು ಮುಂದಿನ ವರ್ಷ ಮೇ 13 ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ನ್ಯಾ.ಚಂದ್ರಚೂಡ್ ಅವರು ನ.10 ರಂದು ಹುದ್ದೆಯಿಂದ ನಿವೃತ್ತರಾದರು.
ಪ್ರಮಾಣವಚನ ಸ್ವೀಕಾರದ ವೇಳೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧಂಖರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಉಪಸ್ಥಿತರಿದ್ದರು.
ಮೇ 14, 1960 ರಲ್ಲಿ ಜನಿಸಿದ್ದ ನ್ಯಾ.ಸಂಜೀವ್ ಖನ್ನಾ ಅವರು, ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದರು. ಕೆಲವು ಕಾಲ ವಕೀಲರಾಗಿ, ದೆಹಲಿ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಜನವರಿ 2019 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. ಈ ಅವಧಿಯಲ್ಲಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಅವರ ಜಾಮೀನು ಅರ್ಜಿಗಳ ವಿಚಾರಣೆ ಸೇರಿದಂತೆ ಹಲವಾರು ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳ ಪೀಠಗಳ ನೇತೃತ್ವ ವಹಿಸಿದ್ದರು. ಸಂವಿಧಾನ ಪೀಠದ ಭಾಗವಾಗಿ, ನ್ಯಾ.ಖನ್ನಾ ಅವರು ಆರ್ಟಿಕಲ್ 370ರ ರದ್ದು ಮತ್ತು ಚುನಾವಣಾ ಬಾಂಡ್ಗಳ ಪ್ರಕರಣ ಸೇರಿದಂತೆ ಹಲವಾರು ತೀರ್ಪುಗಳಿಗೆ ಕೊಡುಗೆ ನೀಡಿದ್ದಾರೆ.
ಆರ್ಟಿಐ ತೀರ್ಪು ಎಂದ ಹೆಸರಾದ ಪ್ರಕರಣದಲ್ಲಿ ಸ್ವತಂತ್ರ ನ್ಯಾಯಾಂಗವೆಂದರೆ ಮಾಹಿತಿ ಹಕ್ಕು ವಿರೋಧಿಸುವುದಿಲ್ಲವೆಂದು ಬರೆದ ದಿಟ್ಟ ನಡೆಯ ಖನ್ನಾ ಅವರು ಮಹತ್ವದ ಸಾಂವಿಧಾನಿಕ ಪೀಠಗಳಲ್ಲಿ ಕಾರ್ಯನಿರ್ವಹಿಸಿ ಭಾರತೀಯ ನ್ಯಾಯಾಂಗಕ್ಕೆ ಈಗಾಗಲೇ ಮಹತ್ವದ ಕೊಡುಗೆ ನೀಡಿದ್ದಾರೆ. ತಮ್ಮ ಅತ್ಯಲ್ಪ ಅವಧಿಯಲ್ಲಿ ಸಂಜೀವ್ ಖನ್ನಾ ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಏನು ಬದಲಾವಣೆ ಮಾಡಲಿದ್ದಾರೆಂಬುದಕ್ಕೆ ಕಾಲವೇ ಉತ್ತರಿಸಬೇಕು.