ಬೆಂಗಳೂರು:- ಹಿಂದೆ ಮಂಡ್ಯ, ರಾಮನಗರದಲ್ಲಿ ಹೀನಾಯ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಆಘಾತ ಎದುರಾಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದುಕೊಂಡಿದ್ದ ದೋಸ್ತಿ ನಾಯಕರಿಗೆ ಶಾಕ್ ಆಗಿದ್ದು, ನಿಖಿಲ್ ತಮ್ಮ ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಎರಡು ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿದ ನಂತರ ನನಗೆ NDA ಅಭ್ಯರ್ಥಿಯಾಗಿ ನಿಲ್ಲುವ ಅವಕಾಶ ಸಿಕ್ಕಿತ್ತು. ಇವತ್ತಿನ ಫಲಿತಾಂಶ ನಮ್ಮ ಕಾರ್ಯಕರ್ತರಿಗೂ, ಬಿಜೆಪಿ ಕಾರ್ಯಕರ್ತರಿಗೂ ಸಾಮಾನ್ಯವಾಗಿ ಆಘಾತ ತಂದುಕೊಟ್ಟಿದೆ. ಪ್ರತಿ ಹಳ್ಳಿಯಲ್ಲೂ ಯುವಕರು, ತಾಯಂದಿರು ಪ್ರೀತಿ ವಾತ್ಸಲ್ಯ ತೋರಿದ್ದಾರೆ. 87 ಸಾವಿರ ಮತಗಳು ನನ್ನ ಪರವಾಗಿ ಬಂದಿದೆ. ಮತದಾರರ ತೀರ್ಪಿಗೆ ನಾವು ತಲೆ ಬಾಗುತ್ತೇವೆ ಎಂದರು.
ಎರಡು ಪಕ್ಷದ ನಾಯಕರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಇದು ಬಯಸದೇ ಬಂದ ಉಪಚುನಾವಣೆ. ಕಡೆ ಹಂತದಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ತಲೆಬಾಗುವ ಸ್ಥಿತಿ ಇದು. ರಾಮನಗರ ಜನತೆ ದೇವೆಗೌಡರು, ಕುಮಾರಣ್ಣನನ್ನು ಎತ್ತರಕ್ಕೆ ಬೆಳೆಸಿದವರು. ನಾನು ಚುನಾವಣೆ ವೇಳೆ ಮಾತಾಡಿದ ಮಾತು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿರಲ್ಲ.
ನಾನು ಕೊಟ್ಟಿರುವ ಯಾವುದೇ ಮಾತು ಹಿಂಪಡೆಯೋದಿಲ್ಲ. ನಾನು ಮಾತಾಡಿರೋ ಮಾತು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಈ ಜಿಲ್ಲೆಯ ಮಗ ಎಂದು ಭಾವಿಸ್ತೀನಿ. ನಾವು ಇಲ್ಲಿ ಜನಿಸಿಲ್ಲವಾದರೂ ನಮ್ಮ ಸಂಪರ್ಕ ಅತ್ಯಂತ ಭಾವನಾತ್ಮಕವಾಗಿದೆ. ರಾಮನಗರ ಜಿಲ್ಲೆಯ ಜನರ ಜೊತೆ ಪ್ರಾಮಾಣಿಕವಾಗಿ ಹೆಜ್ಜೆ ಹಾಕುತ್ತೇನೆ. ಕುಮಾರಣ್ಣನ ಜೊತೆಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.