ಗೂಗಲ್ ಮ್ಯಾಪ್ ಬಳಸೋ ಚಾಲಕರೇ ಹುಷಾರ್! ಸೇತುವೆಯಿಂದ ನದಿಗೆ ಬಿದ್ದ ಕಾರು: ಸ್ಥಳದಲ್ಲೇ ಮೂವರು ಸಾವು

Share to all

ಲಕ್ನೋ: ಗೂಗಲ್ ನೀಡಿರುವ ಬಹುಮುಖ್ಯ ಸೇವೆಗಳಲ್ಲಿ ಮ್ಯಾಪ್ ಕೂಡ ಒಂದು. ನಮಗೆ ಪರಿಚಯ ಇರದ ಯಾವುದೇ ಸ್ಥಳಗಳಿಗೆ ಗೂಗಲ್ ಮ್ಯಾಪ್ ಅಡೆತಡೆ ಇಲ್ಲದೆ ಕರೆದೊಯ್ಯುತ್ತದೆ. ಹೊಸದಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಭೇಟಿ ನೀಡಲಿ ಅಥವಾ ಗುರುತು ಪರಿಚಯವಿಲ್ಲದ ಊರಾಗಲಿ, ಗೂಗಲ್ ಮ್ಯಾಪ್ ಇದ್ದರೆ ಯಾವ ಜಾಗಕ್ಕೆ ಬೇಕಾದರೂ ತಲುಪಬಹುದು.

ಹೀಗೆ ಗೂಗಲ್​​ ಮ್ಯಾಪ್​ ನಂಬಿ ಹೋದವರು ಜಲಸಮಾಧಿಯಾಗಿರುವ ಘಟನೆ ಉತ್ತರ ಪ್ರದೇಶದ ಫರೀದ್‌ಪುರದಲ್ಲಿ ನಡೆದಿದೆ. ಕಾರಿನಲ್ಲಿದ್ದ ಮೂವರು ಗೂಗಲ್‌ ಮ್ಯಾಪ್‌ ಬಳಸಿಕೊಂಡು ತೆರಳುತ್ತಿದ್ದರು. ಸೇತುವೆ ಸಂಪೂರ್ಣ ನಿರ್ಮಾಣವಾಗಿರದ ಕಾರಣ ಕಾರು ಮಧ್ಯದಲ್ಲಿ ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಫರೂಕಾಬಾದ್‌ನ ವಿವೇಕ್ ಕುಮಾರ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಆತನ ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಸಹೋದರರು ಹಾಗೂ ಮತ್ತೋರ್ವ ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ತೆರಳುತ್ತಿದ್ದರು. ಈ ವೇಳೆ ಫರೀದ್‌ಪುರದಲ್ಲಿ ರಾಮಗಂಗಾ ನದಿಯ ಮೇಲೆ ನಿರ್ಮಾಣ ಹಂತದ ಸೇತುವೆಯಿಂದ 50 ಅಡಿ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಕಾರನ್ನು ನದಿಯಿಂದ ಹೊರತೆಗೆದಿದ್ದಾರೆ. ಅಷ್ಟರಲ್ಲೇ ಅದರಲ್ಲಿದ್ದ ಮೂವರು ಸಾವಿಗೀಡಾಗಿದ್ದರು.

ಈ ವರ್ಷ ಉಂಟಾದ ಪ್ರವಾಹದಿದ ಸೇತುವೆಯ ಕುಸಿದಿತ್ತು. ಸೇತುವೆಯನ್ನು ಮರು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಇದು GPS ನಲ್ಲಿ ನವೀಕರಿಸಲಾಗಿಲ್ಲ. ಇದರಿಂದ ಚಾಲಕನ ಗಮನಕ್ಕೆ ಬಂದಿಲ್ಲ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತರ ಕುಟುಂಬಸ್ಥರು, ಸೇತುವೆ ಅಪೂರ್ಣಗೊಂಡಿದೆ. ಬರುವ ವಾಹನಗಳಿಗೆ ಎಚ್ಚರಿಕೆ ನೀಡಲು ಯಾವುದೇ ಬ್ಯಾರಿಕೇಡ್‌ಗಳಿಲ್ಲ ಹಾಗೂ ಸೂಚನಾ ಫಲಕಗಳಿಲ್ಲ ಎಂದು ದೂರಿದ್ದಾರೆ.


Share to all

You May Also Like

More From Author