ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ ಅವರು ಭಾರತದ ವಿರುದ್ಧದ ಸರಣಿಯಿಂದ ಹೊರ ನಡೆದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು, ಉಳಿದೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಹಸರಂಗ 24 ರನ್ಗಳ ಕೊಡುಗೆ ನೀಡಿದ್ದರು. ಹಾಗೆಯೇ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಗಾಯದ ಕಾರಣ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಿಂದ ಹಸರಂಗ ಹೊರಗುಳಿಯಲು ನಿರ್ಧರಿಸಿದ್ದಾರೆ. ಇನ್ನು ಹಸರಂಗ ಅವರ ಬದಲಿಯಾಗಿ ಜೆಫ್ರಿ ವಾಂಡರ್ಸೆ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಭಾರತದ ವಿರುದ್ಧದ ಏಕದಿನ ಸರಣಿಯಿಂದ ಈವರೆಗೆ ಒಟ್ಟು 5 ಆಟಗಾರರು ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ದಿಲ್ಶಾನ್ ಮಧುಶಂಕ ಈ ಸರಣಿಯಿಂದ ಹೊರಗುಳಿದಿದ್ದರು. ಇದರ ಬೆನ್ನಲ್ಲೇ ಭುಜದ ನೋವಿನ ಕಾರಣ ಮಥೀಶ ಪತಿರಾಣ ಕೂಡ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದರು.
ಇದಕ್ಕೂ ಮುನ್ನ ಉಸಿರಾಟದ ಸೋಂಕಿನ ಕಾರಣ ದುಷ್ಮಂತ ಚಮೀರ ಹೊರಗುಳಿದರೆ, ನುವಾನ್ ತುಷಾರ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಇದೀಗ ವನಿಂದು ಹಸರಂಗ ಕೂಡ ಗಾಯದ ಕಾರಣ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.