ಬೆಂಗಳೂರು: ಜಾತಿ ನಿಂದನೆ ಕೇಸ್ನಲ್ಲಿ ಲಾಕ್ ಆಗಿರುವ ಶಾಸಕ ಮುನಿರತ್ನಗೆ ಸಿಹಿ ಸುದ್ದಿಯ ಜೊತೆಗೆ ಕಹಿ ಸುದ್ದಿ ಕೂಡ ಸಿಕ್ಕಿದೆ. ಶುಕ್ರವಾರ ಬಂಧನಕ್ಕೊಳಗಾಗಿದ್ದ ಅವರನ್ನು ಶನಿವಾರ ಕೋರ್ಟ್ಗೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹೌದು ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ. ಇನ್ನೂ. ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.
ಸರ್ಕಾರಿ ಅಭಿಯೋಜಕರಿಗೆ ಆಕ್ಷೇಪಣೆ ಸಲ್ಲಿಸುವಂತೆ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿತ್ತು. ಪ್ರಕರಣ ಸಂಬಂಧ ಅತ್ಯಾಚಾರ ಸಂತ್ರಸ್ತೆಯನ್ನು ರಾಮನಗರದ ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ.
ವಿಚಾರಣೆ ವೇಳೆ ನ್ಯಾಯಾಧೀಶರ ಬಳಿ ಮುನಿರತ್ನ ಅಳಲು ತೋಡಿಕೊಂಡರು. ನನ್ನನ್ನು ಜೈಲಲ್ಲಿ ಇರಿಸಲು ವ್ಯವಸ್ಥಿತವಾದ ಸಂಚು ಹೂಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಇದೆಲ್ಲ ಶುರುವಾಗಿದೆ. ಐದು ವರ್ಷಗಳ ಬಳಿಕ ಅತ್ಯಾಚಾರ ದೂರು ಕೊಡಿಸಿದ್ದಾರೆ.
ಆಕೆ ಮೊದಲೇ ಕೊಡಬಹುದಿತ್ತಲ್ಲವೇ? ನನ್ನನ್ನು ಪೂರ್ತಿ ಐದು ವರ್ಷ ಜೈಲಲ್ಲಿ ಇಡಲು ಪ್ಲಾನ್ ಮಾಡಿಸಿದ್ದಾರೆ. ನಾನು ಜನಪ್ರತಿನಿಧಿಯಾದವನು, ನನಗೆ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿದೆ. ನಾನು ಈ ನ್ಯಾಯಾಲಯದಲ್ಲೆ ಬೇಕಾದರೆ ರಾಜೀನಾಮೆ ಕೊಡುತ್ತೇನೆ. ಆದರೆ ಈ ತರ ಹಿಂಸೆ ತಡೆದುಕೊಳ್ಳಲು ಆಗಲ್ಲ ಎಂದು ಮುನಿರತ್ನ ಅಲವತ್ತುಕೊಂಡರು.