ರೈತನ ಪ್ರತಿ ಕಾಳು ಪತ್ತೆಯಾಗಬೇಕು- ತಪ್ಪು ಮಾಡಿದ ಅಧಿಕಾರಿಗಳು ವಜಾ ಆಗಬೇಕು: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಗ್ರಹ
ಧಾರವಾಡ: ಅಣ್ಣಿಗೇರಿ ಪಟ್ಟಣದಲ್ಲಿನ ಸರಕಾರದ ಉಗ್ರಾಣದಿಂದಲೇ ರೈತರ ಕಡಲೆ ಮತ್ತು ಹೆಸರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಅಧಿಕಾರಿಯು ವಜಾ ಆಗಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಆಗ್ರಹಿಸಿದರು.
ಅಣ್ಣಿಗೇರಿಯಲ್ಲಿ ಹಸಿರು ಸೇನೆ ಅನಿರ್ದಿಷ್ಟವಾಗಿ ಕೈಗೊಂಡ ಹೋರಾಟಕ್ಕೆ ಬೆಂಬಲ ಸೂಚಿಸಿ, ಮಾಜಿ ಸಚಿವರು ಮಾತನಾಡಿದರು.
ಭಾರತೀಯ ಜನತಾ ಪಕ್ಷ ಸದಾಕಾಲವೂ ರೈತರ ಪರವಾಗಿ ಇರತ್ತೆ. ರೈತನು ಶ್ರಮಪಟ್ಟು ದುಡಿದ ಬೆಳೆಯೂ ಸರಕಾರದ ಗೋದಾಮಿನಿಂದಲೇ ಕಳ್ಳತನ ಮಾಡಿದರೇ ಹೇಗೆ. ಇಂತಹ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗುವ ಜೊತೆಗೆ ಅವರನ್ನ ನೌಕರಿಯಿಂದ ವಜಾ ಮಾಡಬೇಕು. ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆ ಇಲ್ಲವೇ ಇಲ್ಲ ಎಂದರು.
ರೈತರಿಗೆ ಇನ್ಸೂರೆನ್ಸ್ ಕೊಡುವುದನ್ನ ಈ ವಿಷಯದಲ್ಲಿ ನಾವು ಒಪ್ಪುವುದಿಲ್ಲ. ರೈತನ ಪ್ರತಿ ಚೀಲವೂ ಅವನಿಗೆ ತಲುಪಬೇಕು. ರೈತರಿಗೆ ಅನ್ಯಾಯವಾದರೇ ಮುಂದಿನ ದಿನಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೋಟ್ಯಾಂತರ ರೂಪಾಯಿ ಮೌಲ್ಯದ ಕಡಲೆ ಮತ್ತು ಹೆಸರು ಕಳ್ಳತನವಾದ ಉಗ್ರಾಣಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಹಾದೇವಿ ಹುಯಿಲಗೋಳ, ಹನಮಂತಪ್ಪ ಕಂಬಳಿ, ಸಿದ್ದು ತೇಜಿ, ಸಂಕೇಶ್ವರ, ಬಂಡೆಪ್ಪನವರ, ಶರಣಪ್ಪಗೌಡ ದಾನಪ್ಪಗೌಡರ, ಷಣ್ಮುಖ ಗುರಿಕಾರ, ಯಲ್ಲಪ್ಪ ಅಕ್ಕಿ, ಶಿವಯೋಗಿ ಸೂರಕೋಡ, ಗುರುನಾಥ ಉಳ್ಳಾಗಡ್ಡಿ, ವಜ್ರಗೌಡ್ರ, ಎ.ಬಿ.ಗುರಿಕಾರ, ಸಿ.ಜಿ.ನಾವಳ್ಳಿ, ಬಸವರಾಜ ಯಳವತ್ತಿ, ಶಿವಾನಂದ ಹೊಸಳ್ಳಿ, ಸಿದ್ಧನಗೌಡ ಪಾಟೀಲ, ಈರಣ್ಣ ಪಟ್ಟೇದ, ರಾಜು ವೆರ್ಣೇಕರ, ತವನೇಶ ನಾವಳ್ಳಿ, ರಾಘವೇಂದ್ರ ರಾಮಗಿರಿ, ರಾಜು ಹಳ್ಳಿಕೇರಿ, ಮುತ್ತು ಸೂಡಿ, ಶಂಕರ ಯಾದವಾಡ, ಸಾತಪ್ಪ ಭೋವಿ, ಭಗವಂತ ಪುಟ್ಟಣ್ಣನವರ, ಅಶೋಕ ಕುರಿ ಸೇರಿದಂತೆ ಅನೇಕ ರೈತ ಮುಖಂಡರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.