ಬೆಂಗಳೂರು: ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನಲ್ಲಿ ತೀವ್ರ ಬೆನ್ನು ನೋವಿನಿಂದ ನರಳುತ್ತಿದ್ದ ದರ್ಶನ್ ಚಿಕಿತ್ಸೆ ಪಡೆಯಲೆಂದು ಕುಟುಂಬಸ್ಥರ ಜೊತೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಹೋಗಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್ ಭದ್ರತೆಯೊಂದಿಗೆ ಮನೆಯಿಂದ ಹೊರಟಿದ್ದ ದರ್ಶನ್ 3 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು.
ಈ ವೇಳೆ ಪತ್ನಿ ವಿಜಯಲಕ್ಷ್ಮಿ ಕೂಡ ಜೊತೆಯಲ್ಲಿದ್ದರು. ಆಸ್ಪತ್ರೆ ಆವರಣಕ್ಕೆ ಬಂದ ಬಳಿಕ ಕುಂಟುತ್ತಲೇ ನಟ ಧನ್ವೀರ್ ಕೈ ಹಿಡಿದು ಒಳಗೆ ತೆರಳಿದರು. ಈ ವೇಳೆ ದರ್ಶನ್ ಭೇಟಿಗಾಗಿ ನಟಿ ಅಮೂಲ್ಯ, ಪತ್ನಿ ಜಗದೀಶ್ ಸಹ ಧಾವಿಸಿದ್ದರು. ಸದ್ಯ ತಜ್ಞವೈದ್ಯರು ಪ್ರಾಥಮಿಕ ಕಾರ್ಯ ಶುರು ಮಾಡಿದ್ದು, ರೋಗಿಯ ಹೆಸರು ವಿವರ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಬೆನ್ನುನೋವಿಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಮಾಡಲಿರುವ ವೈದ್ಯರು,
ಬಳಿಕ ಮುಂದಿನ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ. ನವೀನ್ ಚಿಕಿತ್ಸೆ ನೀಡಲಿದ್ದಾರೆ. ಇಂದು ದರ್ಶನ್ ಬೆನ್ನುನೋವಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮುಗಿಸಿದ ನಂತರ ನಟ ಮನೆಗೆ ಮರಳಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಆರೋಗ್ಯ ಚಿಕಿತ್ಸೆಗೆಂದು ಮಾನ್ಯ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ:
ದರ್ಶನ್ ಚಿಕಿತ್ಸೆಗೆ ದಾಖಲಾದ ಹಿನ್ನೆಲೆ ಆಸ್ಪತ್ರೆ ಸುತ್ತಲೂ ಪೊಲೀಸರ ಬಿಗಿ ಬಂದೋ ಬಸ್ತ್ ನಿಯೋಜಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದು, ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.