ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಅವರಿಗೆ ಮನೆ ಊಟ ನೀಡುವುದನ್ನು ಕೂಡಾ ನಿರಾಕರಿಸಲಾಗಿದೆ. ದರ್ಶನ್ ಜೈಲಿನಲ್ಲಿ ಸೊರಗಿದ್ದಾರೆ ಎನ್ನಲಾಗಿದೆ. ಇನ್ನೂ ದರ್ಶನ್ಗೆ ಯಾವುದೇ ವಿಶೇಷ ಸೌಕರ್ಯ ನೀಡದಂತೆ ಕಾರಾಗೃಹ ಇಲಾಖೆ ಐಜಿಗೆ ಹೈಕೋರ್ಟ್ನ ಹಿರಿಯ ವಕೀಲ ಅಮೃತೇಶ್ ಪತ್ರ ಬರೆದಿದ್ದಾರೆ.ಕರ್ನಾಟಕದಲ್ಲಿ ದರ್ಶನ್ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮತ್ತು ಪ್ರಭಾವಿ ನಟ. ಆದರೆ ಯಾವುದೇ ಎಂಎಲ್ಎ, ಎಂಎಲ್ಸಿ ಅಥವಾ ಎಂಪಿ ಅಲ್ಲ. ಜೊತೆಗೆ ಯಾವುದೇ ಶಾಸನಬದ್ಧ ಹುದ್ದೆಯಲ್ಲಿ ಅವರಿಲ್ಲ. ವಿಐಪಿ ಸ್ಟೇಟಸ್ ಹೊಂದಿರುವ ಯಾವುದೇ ರಾಜಕಾರಣಿಯೂ ಅಲ್ಲ. ಅವರು ಕಾನೂನಿನ ಕಣ್ಣಿನಲ್ಲಿ ಓರ್ವ ಸಾಮಾನ್ಯ ವ್ಯಕ್ತಿ. ಹೀಗಾಗಿ ಕಾನೂನಿನ ಅಡಿಯಲ್ಲೇ ಅವರನ್ನು ಪರಿಗಣಿಸಬೇಕು’ ಎಂದು ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.
ಕಾನೂನಿನಂತೆ ದರ್ಶನ್ ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳುವಂತಿಲ್ಲ. ಮನೆಯ ಆಹಾರ, ಬಟ್ಟೆ, ಹಾಸಿಗೆ, ಬರೆಯುವ ಪರಿಕರ, ಎಸಿ, ಟೇಬಲ್, ಚೇರ್ ಮುಂತಾದವುಗಳನ್ನು ಪಡೆಯುವಂತಿಲ್ಲ’ ಎಂದಿರುವ ವಕೀಲರು, ಕರ್ನಾಟಕ ಪ್ರಿಸನ್ಸ್ ಹಾಗೂ ಕರೆಕ್ಷನಲ್ ಮ್ಯಾನ್ಯುವಲ್ 2021, ಆ್ಯಕ್ಟ್ 1963, ಪ್ರಿಸನ್ಸ್ ರೂಲ್ಸ್ 1974 ಉಲ್ಲೇಖಿಸಿದ್ದಾರೆ. ಇನ್ನೂ ಶಿಕ್ಷೆಗೆ ಒಳಪಡದ ಕೈದಿಗೆ ಮನೆಯ ಆಹಾರದ ಅವಶ್ಯಕತೆಯಿದ್ದಲ್ಲಿ ಪ್ರಿಸನ್ಸ್ ಆ್ಯಕ್ಟ್ 1963 ಪ್ರಕಾರ ಪರೀಕ್ಷೆಗೆ ಒಳಪಡಿಸಿ ಐಜಿ ಅನುಮೋದನೆ ನೀಡಬಹುದು. ಆದರೆ, ಈಗಾಗಲೇ ಜೈಲು ನಿಯಮದಲ್ಲಿ ಕೈದಿಗಳಿಗೆ ನೀಡುವ ಆಹಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆಹಾರದ ತೂಕ ಮತ್ತು ಮಾಂಸಹಾರದ ಪೂರೈಕೆಗೆ ಸಂಬಂಧಿಸಿದಂತೆ ನಮೂದಿಸಲಾಗಿದೆ. ದರ್ಶನ್ ಮನೆ ಊಟ ಕೇಳುತ್ತಿದ್ದು, ಇದರಿಂದ ಜೈಲಿನ ಆಹಾರದ ಗುಣಮಟ್ಟದ ಬಗ್ಗೆ ಹಾಗೂ ಜೈಲು ಅಧಿಕಾರಿಗಳ ಬಗ್ಗೆ ವ್ಯತಿರಿಕ್ತ ಭಾವನೆ ಮೂಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.